ಹೇಮಂತನ ತಲೆಗೆ ಕಲ್ಲೇಟು ಬಿದ್ದುದು ದೊಡ್ಡ ಸುದ್ದಿಯೇ ಆಯಿತು. ಎಲ್ಲರ ಬಾಯಲ್ಲೂ ಇದೇ ಮಾತು. "ಪರಿಸರ ಸಮಿತಿ ಸಂಚಾಲಕ ಹೇಮಂತನ ತಲೆಗೆ ಕಾಡುಗಳ್ಳರಿಂದ ಕಲ್ಲೇಟು- ಆಸ್ಪತ್ರೆಗೆ' ಎಂಬ ತಲೆಬರಹದಡಿಯಲ್ಲಿ ಪ್ರಮುಖ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಯಿತು. ಆಸ್ಪತ್ರೆಗೆ ತಂಡೋಪತಂಡವಾಗಿ ಜನ ಬಂದು ಹೇಮಂತನ ಕುಶಲ ವಿಚಾರಿಸಿ ಹೋದರು.
ಚಮೇಲಿಯೂ ಕೆಮ್ಮು ನೆಗಡಿ ಎಂದು ಒಂದೆರಡು ಬಾರಿ ಆಸ್ಪತ್ರೆಗೆ ಬಂದು ಹೇಮಂತನನ್ನು ಕಂಡು ಹೋಗಿದ್ದಳು. ಕಪ್ಪು ಕಣ್ಣಿನ ಆ ಚಾಲೂಕು ಹುಡುಗಿ ಯಾರು? ಎಂದು ಹೇಮಂತ ಮಲಗಿದಲ್ಲಿಯೇ ಯೋಚಿಸುತ್ತಿದ್ದ.
ಕೃಪಾ ಬಂದಾಗ ಕೇಳಿದ. ಅವಳಿಂದ ಆಕೆ ರಾಮಕಿಶನ ಮಗಳು ಚಮೇಲಿ. ಆತ ಬಳ್ಳಾರಿ ಕಡೆಯ ಲಂಬಾಣಿ ತಾಂಡಾದವನಾಗಿದ್ದು ಡಿಸೋಜ ಕರೆದುಕೊಂಡು ಬಂದಿದ್ದ ಮರ ಕಡಿಯುವವರಲ್ಲಿ ಆತ ಒಬ್ಬ ಎಂದು ತಿಳಿಯಿತು.
ಕಾಲಿನ ನೋವು ಕಡಿಮೆಯಾಗಿ ಹೇಮಂತ ಅಡ್ಡಾಡುವಂತಾದ ಕೂಡಲೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಜಯರಾಮ ಮನೆಗೆ ಕರೆದುಕೊಂಡು ಬಂದ. ಹಣೆಯ ಗಾಯವೂ ಮಾಯತ್ತಾ ಬಂದಿತ್ತು.
ಕೃಪಾ ಹೇಮಂತನ ಎದುರು ಸ್ಮರಿಸಿಕೊಂಡಳು. "ಚಮೇಲಿ ಸಮಯಕ್ಕೆ ಬರದೇ ಹೋಗಿದ್ದರೆ ಅಂದು ಏನಾಗುತ್ತಿತ್ತೋ. ದೇವರೇ ಅವಳ ರೂಪದಲ್ಲಿ ಬಂದು ಕಾಪಾಡಿದ. ನಿಮ್ಮ ಕ್ಯಾಮರಾವನ್ನೂ ಅವಳೇ ತಂದುಕೊಟ್ಟು ಹೋಗಿದ್ದಾಳೆ. ನೀವು ಬಿದ್ದಲ್ಲೇ ಇತ್ತಂತೆ. ಅಂದೇ ವಾಪಸ್ಸು ಹೋಗುವಾಗ ಮನೆಗೆ ಒಯ್ದಿದ್ದಳು. ಮರುದಿನ ನೀವು ಕೇಳಿದಾಗ ಎಲ್ಲಿ ಹೋಯಿತೇನೋ ಎಂದು ಬೇಕಂತ ಹೇಳಿದ್ದೆ' ಎಂದು ಕುಡಿ ನೋಟ ಬೀರಿ ನಸು ನಕ್ಕಳು.
ಜಯರಾಮ ಸಂಜೆ ಊಟವಾದ ಮೇಲೆ ಹೇಳಿದ : "ನಿನ್ನೆ ಒಂದು ಲಾರಿ ಬೀಟೆ ಮತ್ತು ಸಾಗುವಾನಿ ಸೈಜು ಹೋಯಿತು. ಗಾರ್ಡ್ ಮತ್ತು ಫಾರೆಸ್ಟರ್ ಜೊತೆಗೇ ಇದ್ದರು. ಎಲ್ಲಾ ಮಾಲಿಗೆ ಛಪ್ಪಾ ಹೊಡೆದು ಹಳದಿ ಬಣ್ಣದ ನಂಬರು ಹಾಕಿದ್ದರು. ಚಕಿಂಗ್ ನಾಕೆಗಳಲ್ಲಿ ಜಫ್ತ್ ಮಾಡಿದ ಮಾಲು, ಹಿರವತ್ತಿ ಸರಕಾರಿ ಟಿಂಬರ್ ಡಿಪೊಕ್ಕೆ ಹೋಗುತ್ತದೆ ಎಂಬ ಕಾರಣ ನೀಡುವುದರಿಂದ ಲಾರಿ ನಿರಾತಂಕವಾಗಿ ಸಾಗಲು ಅನುವಾಗುತ್ತದೆ. ಯಲ್ಲಾಪುರದ ಗಡಿಯಲ್ಲಿ ಹಿರವತ್ತಿಗಡಿ ದಾಟಿಸಿ ಅವರು ಹಿಂತಿರುಗುತ್ತಾರೆ. ನಂತರ ಏನೂ ತೊಂದರೆ ಇಲ್ಲ. ಹುಬ್ಬಳ್ಳಿಗೋ ಮತ್ತೆಲ್ಲಿಗೋ ಮಾಲು ರವಾನೆಯಾಗುತ್ತದೆ. ಹೀಗೆ ವಾರಕ್ಕೆರಡು ಬಾರಿಯಾದರೂ ಹೋಗುತ್ತದೆ.
ಡಿಸೋಜನ ಗ್ಯಾಂಗ್ ಅಂಥ ದೊಡ್ಡದೇನೋ ಆಗಿರಲಿಲ್ಲ. ಹತ್ತು ಹನ್ನೆರಡು ಜನ ಇದ್ದಿರಬಹುದಾದ ಗೂಂಡಾ ತಂಡ ಅಷ್ಟೆ. ಆದರೆ, ಫಾರೆಸ್ಟ್ ಮಾಫಿಯಾ ಮತ್ತು ಭೂಗತ ಜಗತ್ತಿನೊಂದಿಗೆ ಅವನಿಗೆ ಸಂಪರ್ಕವಿತ್ತು. ಹಣದ ಹೊಳೆ ಹರಿಸುವುದರಿಂದ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳೂ ಅವನ ಜೇಬಿನಲ್ಲಿದ್ದರು. ಇಡೀ ಜನ ಸಮೂಹ ಇದರ ವಿರುದ್ಧ ಸಿಡಿದೆದ್ದರೆ ಅವರೆಲ್ಲ ಕೈ ಬಿಡುತ್ತಿದ್ದರು. ಲಂಚಕ್ಕಾಗಿ ಹೆಚ್ಚೆಚ್ಚು ಹಣ ಚೆಲ್ಲುವಂತೆ ಮಾಡುವುದು, ಮಾಲು ರವಾನೆ ಕಮ್ಮಿಯಾಗುವಂತೆ ಯತ್ನಿಸುವುದು, ಅವನ ಗ್ಯಾಂಗಿನ ಜನರೆಲ್ಲ ಒಬ್ಬೊಬ್ಬರಾಗಿ ಕಳಚಿಕೊಳ್ಳುವುದಕ್ಕೆ ಕಾರಣವಾಗುತ್ತಿತ್ತು. ಆಗ ಖಂಡಿತ ಆತ ಹತಪ್ರಭನಾಗುತ್ತಿದ್ದ. ಇದಕ್ಕೆ ಯೋಜನಾಬದ್ಧ ತಂತ್ರ ರೂಪಿಸುವದು ಇವರ ಮುಂದಿನ ಕೆಲಸವಾಗಿತ್ತು.
ಹೇಮಂತನ ತಲೆಗೆ ಕಲ್ಲೇಟು ಬಿದ್ದುದು ಅವನಿಗೆ ಸಹಾನುಭೂತಿ, ಜನಪ್ರಿಯತೆಯನ್ನು ತಂದುಕೊಟ್ಟಿತು. ಸಂಘಟನೆಗೆ ಅದು ನೆರವಾಯಿತು. ಕೃಪಾ, ಜಯರಾಮ, ಹೇಮಂತ ಸೇರಿ "ಕನ್ನಡ ಪರಿಸರ ಬಳಗ" ಹುಟ್ಟು ಹಾಕಿದರು. ಊರಿನ ಯುವಕರು, ಹೆಣ್ಣುಮಕ್ಕಳು, ಗಣ್ಯರು ಬಳಗದ ಸದಸ್ಯರಾದರು. ಗ್ರಾಮ ಸುಧಾರಣೆ, ಸಾಹಿತ್ಯಗೋಷ್ಠಿ, ಪರಿಸರ ಜಾಗೃತಿ ಕಾರ್ಯಾಗಾರ - ಹೀಗೆ ವಿವಿಧ ವಿಧಾಯಕ ಕಾರ್ಯಕ್ರಮಗಳಿಂದ ಬಳಗ ಜನಪ್ರಿಯವಾಯಿತು. ಹೇಮಂತ ತಾನು ಕಲೆಹಾಕಿದ ಮಾಹಿತಿಗಳ ಬಗ್ಗೆ ಪತ್ರಿಕೆಗಳಿಗೆ ಬರೆದ. ಇಡೀ ಜಿಲ್ಲೆಯ ಗಮನವನ್ನು ಸೆಳೆದ. ಊರಿನಲ್ಲಿ ಪರಿಸರ ಜಾಗೃತಿಯ ಕಹಳೆ